ಕಾರಣವಿಲ್ಲದೆ ಕಳಚಿಕೊಂಡ ಬಂಧಕ್ಕೆ ತಟ್ಟಿದ್ಯಾರ ಶಾಪ!!
ಮತ್ತೆ ನೀನೇ ಎದುರಿಗೆ ಬಂದು ನಿಂತು ಕಾಡಿಸುತ್ತಿದ್ದೀಯಾ..ಎಷ್ಟೇ ಮರೆಯೋಣವೆಂದರೂ ನೀನು ಮಾತ್ರ ಮಾಗಿ ಚಳಿಯಲ್ಲಿ ಹುಟ್ಟಿ ಬರುವ ಸೂರ್ಯನಂತೆ.. ಹೌದು, ಇಷ್ಟು ದಿನ ಕಾಣೆಯಾಗಿದ್ದ ನೀನು ಈ ಮುಸಾಫಿರ್ನ ಕಣ್ಮುಂದೆ ಹೆಜ್ಜೆ ಹಾಕಿದ್ದು ನೆನಪಿಸಿಕೊಂಡರೆ ಮುಂದಿನ ಏಳೂ ಜನ್ಮಕ್ಕೆ ನಿದ್ದೆ ಬರುವುದಿಲ್ಲ.. ನನಗೆ ಬೇಕಿತ್ತಾ..? ನಿನಗೆ ಬೇಡವಾಗಿತ್ತಾ..? ಅಥವಾ ಅದು ಪರಿಸ್ಥಿತಿಯ ಕೈಗೂಸಾಗಿತ್ತಾ..! ಅದ್ಯಾವುದೂ ಇಂದಿಗೆ ಅಪ್ರಸ್ತುತ. ಆದರೂ ಮತ್ತೆ ಮತ್ತೆ ನೀನು ನನ್ನೊಂದಿಗೆ ಹೃದಯದ ಬಡಿತದಂತೆ ಸದಾ ಇರಬೇಕೆಂದು ಬಯಸುತ್ತದೆ ಈ ಮನ. ಹಾಗಿದ್ದಾಗ ಋತುಗಳೇ ಉರುಳಿದ ಬಳಿಕ ಮಾಘ ಮಾಸದಲ್ಲಿ ನಿನ್ನಾಗಮನ ಬೆಂಕಿಯ ಗೂಡಿನ ಮುಂದೆ ಬೆಚ್ಚಗೆ ಮಲಗಿದ್ದ ಮನಸ್ಸಿಗೆ ಎಚ್ಚರ ತಪ್ಪಿಸುವಂತಾಗಿತ್ತು. ಆಗ ಎದ್ದಿದ್ದು ಒಂದೇ ಪ್ರಶ್ನೆ.. ಏಕೆ ಬಂದೆ? ಉತ್ತರವನ್ನು ಯಾರ ಬಳಿ ಕೇಳಲಿ.. ಹೇಗೆ ಅಂತ ವಿವರಿಸಲಿ ಆ ತಳಮಳ.. ಆದರೂ ಮನದಲ್ಲಿ ಮೂಡಿದ ಸಾವಿರಾರು ಪ್ರಶ್ನೆಗಳಿಗೆ ಮುಗುಳು ನಗುತ್ತಾ ನೀ ಬೀರುವ ಕಣ್ಣೋಟವೊಂದೇ ಉತ್ತರವಾ! ಎಲ್ಲಿ ಹೇಳಿಕೊಳ್ಳಲಿ ಈ ದುಗುಡವನ್ನ.. ಮತ್ತೇಕೆ ಇಂಥ ಡೋಲಾಯಮಾನದಲ್ಲಿ ತಂದು ನಿಲ್ಲಿಸಿ ಬಿಟ್ಟೆ ನನ್ನನ್ನು.. ಉತ್ತರಿಸುವವರ್ಯಾರು? ಎಲ್ಲಾ ಗೊತ್ತಿದ್ದರೂ ನನ್ನ ಬಾಯಲ್ಲೇ ಕೇಳಬೇಕೆನ್ನುವ ನಿನ್ನ ಹಠಮಾರಿತನ...


0 Comments